Tuesday, December 28, 2010

ಮನಸು

ಪರದೆಯ ಮೇಲೆ ಪರದಾಡುತಿರುವ ಮನಸುಗಳೆ
ಸರತಿಯ ಮೇಲೆ ಕಾಯುತಿರುವ ಕನಸುಗಳೆ
ಮನಸುಗಳ ತಣಿಸಲು ಬರುತಿರುವ ಹನಿಗಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಕನಸುಗಳ ಹೊಳೆ
ಬನ್ನಿ ಬನ್ನಿ ಹರಿಸಿ ಮನಸಲಿ ಬಯಕೆಗಳ ಹೊಳೆ

ಸೂರ್ಯನ ಕಿರಣಕೆ, ಹನಿಗಳ ಚೆಂದಕೆ, ಅರಳುತಿದೆ ಕಾಮನಬಿಲ್ಲು
ಚಂದ್ರನ ಹೊಳಪಿಗೆ, ಇರುಳಿನ ನಾಚಿಕೆ, ಕಾಣುತಿದೆ ಪ್ರತಿ ಹೂವಲ್ಲು
ಹೋಗು ಹೋಗು ಹೇಳಿ ಹೋಗು ಒಗಟಿನ ಉತ್ತರ
ಇರುವೆ ಏಕೆ ನೀನು ಕೈಗೆ ಸಿಗದಷ್ಟು ಎತ್ತರ

Friday, December 24, 2010

ಕವಿತೆಗೆ ಸ್ಫೂರ್ತಿ

ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು
ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು
ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು
ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು

ನಿನ್ನ ಜೊತೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು
ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು
ಕಣ್ಣೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು

ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು
ನಿನ್ನ ಕನಸುಗಳು ನವೀನ ಚರಣಗಳಾಗಬಹುದು
ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು
ನೀ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ ಕವಿಯಾಗಬಹುದು


Monday, December 20, 2010

ಕಣ್ಣೀರ ಕಥೆ

ಕಣ್ಣಲ್ಲಿನ ಕನಸೆಲ್ಲ ಕಣ್ಣೀರಾಗಿ ಹರಿದಂತೆ
ನನ್ನೆದೆಯ ಒಳಗಿಂದ, ನೀ ಎದ್ದು ಹೋದಂತೆ
ನನಗೆ ಭಾಸವಾಯಿತು, ಮೈ ಮೆಲ್ಲನೆ ನಡುಗಿತು

ಗಾಳಿಯಲ್ಲಿನ ತಂಪೆಲ್ಲ ಮರೆಯಾಗಿ, ಬಿರುಗಾಳಿಯಾದಂತೆ
ನನ್ನ ಕನಸಿಂದ ಯಾರೋ ನಿನ್ನ ಕರೆದೊಯ್ಯದಂತೆ
ನನಗೆ ಭಾಸವಾಯಿತು, ಎದೆ ಬಡಿತ ಹೆಚ್ಚಾಯಿತು

ಮುಳ್ಳೆಲ್ಲ ಆಕ್ರೋಶದಿಂದ ಹೂಮೇಲೆ ಬಿದ್ದಂತೆ
ಬಾಳ ಪುಟಗಳಿಂದ ನಿನ್ನ ಹೆಸರು ಅಳಿಸಿ ಹೋದಂತೆ
ನನಗೆ ಭಾಸವಾಯಿತು, ಕಣ್ಣೆಲ್ಲ ನೀರಾಯಿತು

- Vರ ( Venkatesha ರಂಗಯ್ಯ )

Saturday, March 13, 2010

ಪ್ರೇಮ ಪಲ್ಲವಿ

ನಮ್ಮ ಬಾಳಿಗೆ ಪ್ರೀತಿ ದೀವಿಗೆ
ಕೊಟ್ಟ ದೇವರಿಗೆ ಹೇಳೋಣ ವಂದನೆ
ಒಲವ ಹಾದಿಗೆ ಪ್ರೇಮ ಬಳ್ಳಿಗೆ
ತೊಂದರೆ ನೀಡಿದವರಿಗೆ ವಿಧಿಸೋಣ ದಂಡನೆ

ನಿನ್ನ ಕಣ್ಣನು ಕಂಡು ಕರಗಿದೆ
ನಿನ್ನ ಕಣ್ಣಲೆ ನಾನು ನೆಲೆಸಿದೆ
ನೀನು ಎದುರಿದ್ದರೆ ನನಗೇನು ಬೇಡವೆ
ನಿನ್ನ ನೋಡುತ ಹಸಿವನ್ನೆ ಮರೆಯುವೆ

ನನ್ನ ಪ್ರೀತಿಯು ಎಂದು ಕಡಿಮೆಯಾಗದು, ಭಯವು ಬೇಡವೆ
ನೀನು ಅತ್ತರೆ ಭಯವ ಪಟ್ಟರೆ ತಾಳೆನು ಓ ಚೆಲುವೆ
ನಮ್ಮಿಬ್ಬರ ಉಸಿರು ಒಂದೇ ಆಗಿರಲೆಂದು ನಾನು ಬೇಡುವೆ
ನೀನೆ ಇರದಿರೆ ಬಾಳಿಗೆ ಅರ್ಥ ಇಲ್ಲವೇ, ಎಲ್ಲ ಶೂನ್ಯವೆ

- Vರ ( Venkatesha ರಂಗಯ್ಯ )

Monday, August 31, 2009

ನಿನ್ನಿಂದ ಎಲ್ಲ ನಿನ್ನಿಂದ

ಬದುಕು ಬಂಗಾರವಾಯಿತು
ಬಾಳು ಬೆಳಕಾಯಿತು
ಮನಸು ಹಗುರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕನಸು ನನಸಾಯಿತು
ಉಸಿರು ಸಂಗೀತವಾಯಿತು
ಹೆಸರು ಪ್ರಸಿಧ್ಧ ಹೆಸರಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಕಣ್ಣು ಕಣ್ಣು ಕಲೆತಾಯಿತು
ಹೃದಯ ಹೃದಯ ಮಿಡಿದಾಯಿತು
ಒಲವು ಬಂದು ಮನಸು ಒಂದಾಯಿತು
ನಿನ್ನಿಂದ ಎಲ್ಲ ನಿನ್ನಿಂದ

ಭಾವನೆಗಳಿಗೆ ಜೀವ ಬಂದಾಯಿತು
ಕನಸುಗಳಿಗೆ ರೆಕ್ಕೆಪುಕ್ಕ ಬಂದು ಹಾರಾಯಿತು
ಬದುಕಿಗೆ ಪರಿಪೂರ್ಣತೆ ಸಿಕ್ಕಂತಾಯಿತು
ನಿನ್ನಿಂದ ಎಲ್ಲ ನಿನ್ನಿಂದ

- Vರ ( Venkatesha ರಂಗಯ್ಯ )

ಭಾರತ - ನಮ್ಮ ದೇಶ

ಇದೆ ನೋಡು ಭಾರತ ದೇಶ
ದೇಶವ ಮುನ್ನಡೆಸುವ ಪ್ರಜೆಯೇ ಈಶ
ಸಾರುವೆವು ಒಕ್ಕೊರಲಿನಿಂದ ಪ್ರೀತಿ ಸಂದೇಶ
ತೆಗೆಯುವೆವು ಎಲ್ಲರ ಮನಸಿಂದ ಅಸೂಯೆ ದ್ವೇಷ
ಗಾಂಧಿ ಕಟ್ಟಿದ ಗೂಡಿದು ನೆಹರು ಬೆಳೆಸಿದ ನಾಡಿದು
ಶಾಂತಿ ಮಂತ್ರ ಭಾವೈಕ್ಯತೆ ಭಾವನೆ ನಮ್ಮದು
ದೇಶ ಭಾಷೆಯ ಅಭಿಮಾನ ತುಂಬಿರುವ ಉಸಿರು ನಮ್ಮದು
ದೇಶ ಭಕ್ತರೆಲ್ಲ ಸೇರಿ ಹಾಕಿದರು ಭದ್ರ ಬುನಾದಿ
ನಮಗೆಲ್ಲ ದಾರಿ ದೀಪ ಅವರು ತೋರಿದ ಹಾದಿ

-Vರ ( Venkatesha ರಂಗಯ್ಯ )

ಮನಸಾರೆ

ಆಸರೆ ನಿನ್ನಾಸರೆ ಬಯಸಿದೆ ಮನಸಾರೆ
ಉಸಿರೇ ನನ್ನುಸಿರೇ ಕನವರಿಸುತಿದೆ ಕನಸಾರೆ
ಕನಸಿನಲ್ಲಿ ಕಂಡ ಓ ತಾವರೆ
ಮನಸಿಂದಾಗಿದೆ ನಿನ್ನ ಕೈಸೆರೆ

ಪ್ರೀತಿ ಹೂವಿನಲ್ಲಿನ ಮಕರಂದ
ಸವಿಯೋ ಆತುರದಲ್ಲಿನ ಆನಂದ
ಹೇಗೆ ವಿವರಿಸಲಿ ನಾ ಸುಖದಾನಂದ

ಕಣ್ಣಿನ ನೋಟಗಳಲ್ಲಿರುವ ಆತ್ಮೀಯತೆ
ಕಂಡಾಗ ಉಲ್ಬಣಿಸುತ್ತಿದೆ ಭಾವ ತೀವ್ರತೆ
ಕಡಲ ತೀರದ ಅಲೆಗಳ ಒಕ್ಕೊರಲತೆ
ನೋಡುತ ನಲಿಯುತಿದೆ ಪ್ರೀತಿಯ ಲತೆ

- Vರ ( Venkatesha ರಂಗಯ್ಯ )