Monday, September 15, 2008

ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???

ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ. ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ. ಎಷ್ಟು ಜಾತಿ ಹೂವುಗಳು ಈ ಪ್ರಪಂಚದಲ್ಲಿ ಇದಾವೋ ಅಷ್ಟು ರೀತಿಯ ಹುಡುಗೀರು ಇದಾರೆ ಸ್ವಾಮಿ. ಕೆಲವರು ಮಲ್ಲಿಗೆ ಇದ್ದ ಹಾಗೆ, ಇನ್ನು ಕೆಲವರು ಗುಲಾಬಿ ಇದ್ದ ಹಾಗೆ, ಇನ್ನು ಕೆಲವರು ಸಂಪಿಗೆ, ಇನ್ನು ಕೆಲವರು ಕಾಲಿಫ್ಲೋವೆರ್ !!!. ಹೀಗೆ ಇನ್ನು ಅನೇಕಾನೇಕ ಹುಡುಗೀರು ಇದಾರೆ. ಒಂದು ಹುಡುಗಿ ಯಾವ್ ಜಾತಿ ಹೂವಿಗೆ ಸೇರುತ್ತಾಳೆ ಅನ್ನೋದು ಹೂವಿನ ಗುಣ ಮತ್ತು ಹೆಣ್ಣಿನ ಗುಣದ ಹೋಲಿಕೆಯಿಂದ ಗೊತ್ತಾಗುತ್ತೆ. ಒಂದು ಉದಾಹರಣೆ ಇಲ್ಲಿ ಕೊಡ್ತೀನಿ. ಗುಲಾಬಿ ಹೂವಿನಲ್ಲಿ ಮ್ರುದುತ್ವನು ಇದೆ, ಚುಚ್ಚೋ ಸ್ವಭಾವನು ಇದೆ. ಗುಲಾಬಿ ಹೂವಿನ ಎಲೆ ಮುಟ್ಟಿದಾಗ ಆನಂದ ಸಿಗುತ್ತೆ, ಮುಳ್ಳು ಮುಟ್ಟಿದಾಗ ನೋವಾಗುತ್ತೆ. ಗುಲಾಬಿ ಥರ ಇರೋ ಹುಡುಗೀರು ಕೆಲವು ಸಲ ಅವರ ಒಳ್ಳೆತನದಿಂದ ತುಂಬ ಖುಷಿಯಾಗಿರ್ತಾರೆ. ಕೆಲವು ಸಲ ಸಕತ್ ಕಿರ್ಕಿರಿ ಮಾಡ್ತಾರೆ. ಇನ್ನು ಕೆಲವರು ನೋಡೋದಿಕ್ಕೆ ಸೀದಾ ಸಾದಾ ಥರ ಇರ್ತಾರೆ ಆದ್ರೆ ತುಂಬ ತಲೆ ತಿಂತಾರೆ. ಹೀಗೆ ಯೋಚನೆ ಮಾಡಿದ್ರೆ ಹೋಲಿಕೆಗಳು ಸಿಗ್ತವೆ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ಸತ್ಯ ಅಂತ ಅಲ್ಲ..ಕೆಲವು ಹೋಲಿಕೆಗಳು ಇದ್ದೆ ಇರ್ತವೆ ಅನ್ನೋದು ನನ್ನ ಅಭಿಪ್ರಾಯ. ಹೂವಿನ ಗುಣದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರೋದ್ರಿಂದ ನಿಮ್ಮ ಮನದರಸಿ ಗುಣ ಯಾವುದು ಅಂಥ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ. ಅವರ ಗುಣ ಅರ್ಥ ಆದಾಗ , ಅವರ ಜೊತೆ ಹೇಗೆ ಇರಬೇಕು ಅನ್ನೋದು ಗೊತ್ತಾಗುತ್ತೆ. ಈ ಸತ್ಯ ತಿಳಿದಾಗ ಹೂವು(ಹುಡುಗಿ) ಬಾಡದ (ಬೇಜಾರಾಗದ) ಹಾಗೆ ನೀವು ನೋಡಿಕೊಳ್ತೀರ. ಆಗ ನಿಮ್ಮ ಜೀವನ ಸಕತ್ ಚೆನ್ನಾಗಿರುತ್ತೆ....ನೀವೇನಂತೀರಾ ಗೆಳೆಯರೇ ಮತ್ತು ಗೆಳತಿಯರೆ ?

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

Thursday, September 11, 2008

ರಂಗೋಲಿ ನಾಯಕಿ

ಮನೆಯ ಮುಂದಿರುವ ರಂಗೋಲಿ ನಲಿಯುತಲಿ
ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ
ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ
ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ
ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ
ಕಾಣುತಿಹಳು ಅತಿಸುಂದರ ಅಲಂಕಾರಗಳೇ ಇಲ್ಲದಂತೆ
ಕಣ್ಣ್ ರೆಪ್ಪೆಗಳು ಏನನ್ನೋ ಸನ್ನೆ ಮಾಡುತ್ತಿವೆ ಅವಳಿಗೆ ಅರಿವಿಲ್ಲದಂತೆ
ಅವಳ ಕಣ್ಣುಗಳಿಗೆ ಸೋತುಹೋಗಿ ನಾ ಬಯಸುತಿರುವೆ ಅವಳ ಜೊತೆ

-Vರ ( Venkatesha ರಂಗಯ್ಯ )

Wednesday, September 10, 2008

ಮುಂಗಾರು ಮಿಂಚು

ಮುಂಗಾರಿನ ಮಿಂಚಂತೆ ನನ್ನೆದುರು ನೀ ಬಂದೆ
ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ
ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ
ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು
ಪ್ರತಿಯೊಂದು ಹನಿ ಇಂದು ಹೇಳುತಿದೆ ಮಾತೊಂದು
ಬಯಸುತಿದೆ ಮನಸಿಂದು ನೀ ಸನಿಹ ಬೇಕೆಂದು
ನನ್ನ ಹೃದಯವನು ಕದ್ದೆ ಜೊತೆಯಲ್ಲೇ ನಿದ್ದೆಯನು ಕದ್ದೆ
ನಿನ್ನ ನೋಡಲಾರದೆ ಮುಚ್ಚಲೊಪ್ಪವು ಕಣ್ಣುಗಳು
ಕಾರ್ಮೋಡ ಧರೆಗಿಳಿಯಲು ಕಾದಿರುವಂತೆ
ತುದಿಗಾಲಲ್ಲಿ ನಿಂತು ನಿನಗಾಗಿ ನಾ ಕಾಯುತಿರುವೆ.

-Vರ ( Venkatesha ರಂಗಯ್ಯ )

Tuesday, September 9, 2008

ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?

ನನ್ನ ಪ್ರೀತಿಯ ಕನ್ನಡಿಗರೇ, ನಮ್ಮ ಭಾಷೆ ಕನ್ನಡದ ಸ್ಥಿತಿ ಗತಿ ಏನಾಗಿದೆ ಅನ್ನೋ ವಿಷಯ ಸುಮಾರು ದಿನದಿಂದ ನನಗೆ ಕಾಡ್ತಾನೆ ಇದೆ. ಮೊನ್ನೆ ಹೀಗೆ ಯೋಚನೆ ಮಾಡ್ತಾ ಇದ್ದೆ. ಆಗ ನನಗೆ ಕಾಡಿದ ಪ್ರಶ್ನೆ " ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ? " . ನಾನು ಇತ್ತೀಚೆಗೆ ಗಮನಿಸ್ತಾ ಇರೋದು ಏನಂದ್ರೆ ಮಕ್ಕಳು ಹಿಂದಿ ಹಾಡಿಗೆ ನೃತ್ಯ ಮಾಡ್ತಾರೆ ಇಲ್ಲ ದೊಡ್ಡವರು ಹಿಂದಿ ಹಾಡುಗಳನ್ನ ಹಾಡ್ತಾರೆ. ಯಾಕ್ ಸ್ವಾಮಿ ಕನ್ನಡದಲ್ಲಿ ಚೆನ್ನಾಗಿರೋ ಹಾಡುಗಳು ನಿಮಗೆ ಸಿಗೊದಿಲ್ವೆ. ಅರ್ . ಏನ್ . ಜಯಗೋಪಾಲ್ , ಚಿ. ಉದಯಶಂಕರ್, ವಿಜಯನಾರಸಿಂಹ ಅಂಥವರು ಎಷ್ಟು ಚೆನ್ನಾಗಿ ಒಳ್ಳೆ ಹಾಡುಗಳನ್ನ ಬರೆದಿದ್ದಾರೆ. ನಮ್ಮ ಹಾಡುಗಳನ್ನ ಹಾಡೋದು ಬಿಟ್ಟು ನಿಮಗೆ ಹಿಂದಿ ಹಾಡೇ ಆಗಬೇಕೆ ಹಾಡೋದಿಕ್ಕೆ, ನಿಮ್ಮ ಪ್ರತಿಭೆನಾ ತೋರಿಸೋದಿಕ್ಕೆ. ರಿಯಾಲಿಟಿ ಶೋ ಕಾರ್ಯಕ್ರಮದ ಇನ್ನೊಂದು ವಿಶೇಷ ಏನಂದ್ರೆ ಕಾರ್ಯಕ್ರಮ ಶುರು ಆಗೋದೇ ಆಂಗ್ಲ ಆಮಂತ್ರಣ ವಾಕ್ಯದಿಂದ. ಹಾಡು ಹೇಳಿದವರಿಗೆ, ನೃತ್ಯ ಮಾಡಿದವರಿಗೆ ಪ್ರಶಂಸೆ ಕೂಡ ಸಿಗೋದು ಇಂಗ್ಲಿಷ್ನಲ್ಲೇ . ನಮ್ಮ ಜಡ್ಜಸ್ಗಳೆಲ್ಲ ಕನ್ನಡ ಚಿತ್ರರಂಗದ ಅತಿರತ ಮಹಾರತರೆ. ನಿಮಗೆ ನಾನು ಕೇಳೋದು ಒಂದೇ ಪ್ರಶ್ನೆ , ಕನ್ನಡದಲ್ಲಿ ಮಾತಾಡಿದ್ರೆ ನಿಮಗೆ ಅವಮಾನ ಆಗುತ್ತ. ಟಿವಿ ಸಂದರ್ಶನದಲ್ಲಿ ಕೂಡ ನಿಮ್ಮ ಚಿತ್ರಗಳ ಬಗ್ಗೆ ಮಾತಾಡ್ಬೇಕಾದ್ರೆ ಇಂಗ್ಲಿಷ್ ನಲ್ಲಿ ಮಾತಾಡಿದ್ರೆ ಸತ್ಯವಾಗಲು ಕನ್ನಡಿಗರು ನಿಮ್ಮ ಚಿತ್ರನ ನೋಡಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಗೋದಕ್ಕೆ ನಾವೆಲ್ಲ ಒಗ್ಗಟ್ಟಾಗಿ ದುಡಿತ ಇರಬೇಕಾದ್ರೆ, ನೀವು ಹೀಗೆ ಮಾಡ್ತಾ ಇರೋದು ಸರೀನಾ???

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

ನಟಸಾರ್ವಭೌಮನಿಗೆ ನಮಸ್ಕಾರ

ಕನ್ನಡ ನಾಡಿನ ಹೆಮ್ಮೆಯ ಕುವರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ
ಹಾಡಿ ಹರಡಿದರು ಕನ್ನಡದ ಕಂಪನ್ನು
ಬೆಳೆಸಿದರು ಮುಗಿಲೆತ್ತರಕೆ ಕನ್ನಡವನ್ನು
ಗಳಿಸಿದರು ಈ ನಾಡ ಜನರ ಪ್ರೀತಿಯನ್ನು
ದೀಪ ಹಾರಿ ಹೋಯಿತಾದರೂ ಕೊಟ್ಟ ಬೆಳಕು ನಿರಂತರ
ಜನ ಮಾನಸದಲ್ಲಿ ರಾಜಣ್ಣ ಎಂದೆಂದೂ ಅಜರಾಮರ

-Vರ ( Venkatesha ರಂಗಯ್ಯ )

ಪ್ರೀತಿಯ ಫಿಲಾಸಫಿ

ಪ್ರೀತಿ ಕಣ್ಣಿಗೆ ಕಾಣೋಲ್ಲ ಆದರು ನಾವು ಅನಂದಿಸಲ್ವಾ , ಆಹ್ಲಾದಿಸಲ್ವಾ, ಕುರುಡು ಪ್ರೇಮಿಯಾಗಿ ಪ್ರೀತಿಸೋದಿಲ್ವಾ.
ನಾವು ಈ ಜಗತ್ತಿನಲ್ಲಿ ಎಲ್ಲವನ್ನು ಪ್ರೀತಿಸ್ತೀವಿ. ಹಾಕ್ಕೊಳ್ಳೋ ಬಟ್ಟೇನ ಪ್ರೀತಿಸ್ತೀವಿ, ತಲೆ ಬಾಚಿಕೊಳ್ತಾ ಕನ್ನಡಿಯಲ್ಲಿ ಕಾಣೋ ನಮ್ಮ ಬಿಂಬನ ಪ್ರೀತಿಸ್ತೀವಿ. ನಮ್ಮ ಬಿಂಬದ ಪಕ್ಕ ಒಬ್ಬಳು ಸುಂದರ ಹುಡುಗಿಯನ್ನ ಕಲ್ಪಿಸಿಕೊಂಡು ಅವಳನ್ನ ಪ್ರೀತಿಸ್ತೀನಿ. ನಾವು ಏನನ್ನಾದರೂ ನಿಜವಾಗ್ಲೂ ಪ್ರೀತಿಸಿದರೆ ಅದು ನಮ್ಮದು ಆಗುತ್ತೆ ಅಂಥ ಯಾರೋ ಹೇಳ್ತಿದ್ರು. ಅದು ಎಷ್ಟು ನಿಜ ಗೊತ್ತ.
ಪುಸ್ತಕನ ಪ್ರೀತಿ ಮಾಡಿದಾಗ ವಿದ್ಯೆ ನಮ್ಮದಾಗುತ್ತೆ , ಕೆಲಸಾನ ಪ್ರೀತಿ ಮಾಡಿದಾಗ ಯಶಸ್ಸು ನಮ್ಮದಾಗುತ್ತೆ , ನಮ್ಮನ್ನು ನಾವು ಪ್ರೀತಿಸಿದಾಗ ಜಗತ್ತು ನಮ್ಮದಾಗುತ್ತೆ.
ನಾವು ಪ್ರೀತಿ ಮಾಡೋದನ್ನ ನಿಲ್ಲಿಸಿದಾಗ, ನಮ್ಮ ಜೀವ ಕೂಡ ನಮ್ಮ ಜೊತೆ ಇರದಲೇ ಹೊರಟು ಹೋಗುತ್ತೆ. ಅದಕ್ಕೆ ಹೇಳೋದು ಜೀವನದಲ್ಲಿ ಏನನ್ನಾದರೂ ಬಿಡು, ಪ್ರೀತಿ ಮಾಡೋದನ್ನ ಮಾತ್ರ ಬಿಡಬೇಡ.

ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )

Thursday, September 4, 2008

ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?

ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ. ಅಂಥ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ನಾನು ಒಬ್ಬ ಕಣ್ರೀ. ಇಷ್ಟೆಲ್ಲಾ ಟಿಪ್ಪಣಿನ ಇವನು ಏನಕ್ಕೆ ಬರೀತಾ ಇದಾನೆ ಅಂಥ ನಿಮಗೆ ಅನ್ನಿಸ್ತ ಇರಬಹುದು. ಈಗ ವಿಷಯಕ್ಕೆ ಬರ್ತೀನಿ.

ನನಗೆ ಒಬ್ಬಳು ಆತ್ಮೀಯ ಗೆಳತಿ ಇದ್ದಳು. ಪ್ರತಿ ದಿನ ಇಬ್ಬರು ಫೋನ್ ನಲ್ಲಿ ಕಷ್ಟ ಸುಖ ಮಾತಡ್ಕೊಳ್ತಾ ಇದ್ವಿ. ಪ್ರತಿ ದಿನ ನಾನೇ ಅವಳಿಗೆ ಫೋನ್ ಮಾಡ್ತಾ ಇದ್ದೆ. ನಾನು ಮಾಡ್ಲಿಲ್ಲ ಅಂದ್ರೆ ಕಾಯೋ ಅಷ್ಟು ತಾಳ್ಮೆ ಕೂಡ ಅವಳಲ್ಲಿತ್ತು. ಒಂದ್ ಸಲ ನನಗೆ ಆಫೀಸ್ನಲ್ಲಿ ತುಂಬ ಕೆಲಸ ಇತ್ತು. ಒಂದು ನಾಲ್ಕೈದು ದಿವಸ ನನ್ನನ್ನ ನಾನೇ ಮರೆಯೋ ಅಷ್ಟು ವಿಪರೀತ ಕೆಲಸ ಇತ್ತು. ಊಟ , ತಿಂಡಿ, ನಿದ್ದೆಯ ಕಡೆಗೆ ಗಮನವಿರದಷ್ಟು ಕೆಲಸದಲ್ಲಿ ಏಕಾಗ್ರತೆ!!!. ಈ ಸಮಯದಲ್ಲಿ ನನ್ನ ಆತ್ಮೀಯ ಗೆಳತಿ ಒಬ್ಬಳಿಗೆ ಫೋನ್ ಮಾಡ್ಲಿಕ್ಕೆ ಆಗಿರಲಿಲ್ಲ. ಅವಳಿಗೆ ಕಾದು ಕಾದು ಸಾಕಾಗಿ, ಅವಳೇ ನನಗೆ ಫೋನ್ ಮಾಡಿದ್ಲು . ನಾನು ಫೋನ್ ತಗೊಳ್ತಿದ್ದ ಹಾಗೆ ನಿನದೆ ನೆನಪು ದಿನವು ಮನದಲ್ಲಿ ಅಂಥ ಹಳೆ ಕನ್ನಡ ಹಾಡು ಹೇಳೋಕೆ ಶುರು ಮಾಡಿದ್ಲು. ನಾನು ಏನಕ್ಕೆ ಈ ಹಾಡು ಹೇಳ್ತಿದಿಯ ಅಂಥ ಕೇಳಿದೆ. ಅದಕ್ಕೆ ತಕ್ಷಣ ಅವಳು ಕೋಪದ ದನಿಯಲ್ಲಿ ನನ್ನ ನೆನಪು ನಿನಗೆ ಬರೋದೇ ಇಲ್ಲವಾ ? ಅಂಥ ಕೇಳಿದ್ಲು. ಅವಳ ಆ ಪ್ರಶ್ನೆ ನನ್ನ ಮನಸಿಗೆ ಎಷ್ಟು ನಾಟಿತು ಅಂದ್ರೆ , ನಾನು ತುಂಬ ಭಾವುಕನಾಗಿ ಹೇಳಿದೆ ನನ್ನ ಕಣ್ಣಲ್ಲಿ ನೀರು ಬತ್ತಿ ಹೋಗೋ ವರೆಗೂ ನಿನ್ನ ಮರೆಯೋದಿಲ್ಲ . ಆಗ ಅವಳಿಗೆ ಆದ ಆನಂದ ಅಷ್ಟಿಷ್ಟಲ್ಲ . ಇಂಥ ಭಾವನೆಗಳೇ ಅಲ್ಲವೇ ನಮ್ಮ ಸ್ನೇಹಾನ ಬಲ ಪಡಿಸೋದು , ನಮ್ಮವರು ನಮ್ಮೊಂದಿಗೆ ಸದಾ ಇರೋ ಹಾಗೆ ಮಾಡೋದು .
ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )